ಉಡುಪಿ: ಆಗಸ್ಟ್ -17-2026 swabhimananews :
ನಾಗರ ಪಂಚಮಿ ಆಚರಣೆಯ ಸಂದರ್ಭದಲ್ಲಿ ಹಾಲು, ಹಣ್ಣು, ತುಪ್ಪ, ಜೇನುತುಪ್ಪ, ಎಳನೀರು ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಲ್ಲಿಗೆ ಅಥವಾ ನೀರಿಗೆ ಅರ್ಪಿಸಿ ವ್ಯರ್ಥ ಮಾಡುವ ಬದಲು,
ಅವುಗಳನ್ನು ಅಗತ್ಯವಿರುವವರಿಗೆ ಹಂಚುವ ಮೂಲಕ ಮಾನವೀಯತೆ ಮೆರೆಯುವ ವಿಶೇಷ ಸೇವಾ ಅಭಿಯಾನವನ್ನು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ.), ಉಡುಪಿ ಜಿಲ್ಲೆ.
ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) (ರಿ.) ಉಡುಪಿ ಜಿಲ್ಲೆ ಇದರ ವತಿಯಿಂದ ಸೋಮವಾರ, ಆಗಸ್ಟ್ -17- 2026ರಂದು ಹಮ್ಮಿಕೊಳ್ಳಲಾಯಿತು.
ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸೇವಾ ಕಾರ್ಯದ ಅಂಗವಾಗಿ ಉಪ್ಪೂರು–ಸಾಲ್ಮರದಲ್ಲಿರುವ ಸ್ಪಂದನ ಚಾರಿಟೇಬಲ್ ಟ್ರಸ್ಟ್ನ ವಿಶೇಷ ಚೇತನ ಮಕ್ಕಳು ಹಾಗೂ ನೇಜಾರಿನ ಸ್ಪಂದನ ದಿವ್ಯಾಂಗರ ತರಬೇತಿ ಕೇಂದ್ರದ ವಿಶೇಷ ಚೇತನ ಮಕ್ಕಳಿಗೆ ಹಾಲು, ಹಣ್ಣು, ಸಿಹಿತಿಂಡಿ ಹಾಗೂ ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಹಬ್ಬ-ಆಚರಣೆಗಳ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುವ ಬದಲು, ಹಸಿವು ಮತ್ತು ಅಗತ್ಯದಲ್ಲಿರುವವರ ಬದುಕಿಗೆ ಅವುಗಳನ್ನು ತಲುಪಿಸುವುದು ನಿಜವಾದ ಮಾನವೀಯ ಸೇವೆಯಾಗಿದೆ.
ಆಹಾರವನ್ನು ವ್ಯರ್ಥ ಮಾಡುವುದರಿಂದ ಯಾರಿಗೂ ಉಪಯೋಗವಾಗುವುದಿಲ್ಲ; ಆದರೆ ಅದೇ ಆಹಾರವನ್ನು ಒಬ್ಬ ಅಗತ್ಯವಿರುವ ವ್ಯಕ್ತಿಯೊಂದಿಗೆ ಹಂಚಿಕೊಂಡರೆ ಅದು ಅವರ ಬದುಕಿನಲ್ಲಿ ಸಂತೋಷ, ಆರೋಗ್ಯ ಮತ್ತು ಭರವಸೆಯನ್ನು ಮೂಡಿಸಬಲ್ಲದು ಎಂದು ಸಂಘಟಕರು ಸಂದೇಶ ನೀಡಿದರು.
ಅನ್ನದ ಒಂದು ಹನಿ ವ್ಯರ್ಥವಾಗದಿರಲಿ; ಒಬ್ಬರ ಬದುಕಿಗೆ ಬೆಳಕಾಗಲಿ
ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಿರಬೇಕು. ದೇವರ ಹೆಸರಿನಲ್ಲಿ ಆಹಾರವನ್ನು ವ್ಯರ್ಥ ಮಾಡುವುದಕ್ಕಿಂತ, ಹಸಿದವನಿಗೆ ಆಹಾರ ನೀಡುವುದು, ಅನಾಥರಿಗೆ ಆಸರೆಯಾಗುವುದು, ದಿವ್ಯಾಂಗರಿಗೆ ನೆರವಾಗುವುದು, ವೃದ್ಧರಿಗೆ ಕಾಳಜಿ ತೋರಿಸುವುದು ಹಾಗೂ ವಿಶೇಷ ಚೇತನ ಮಕ್ಕಳ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಪುಣ್ಯಕಾರ್ಯ ಎಂಬ ಸಂದೇಶವನ್ನು ಈ ಅಭಿಯಾನದ ಮೂಲಕ ಸಾರಲಾಯಿತು.
ಆಹಾರವನ್ನು ವ್ಯರ್ಥ ಮಾಡಬೇಡಿ; ಅಗತ್ಯವಿರುವವರಿಗೆ ಹಂಚಿಕೊಳ್ಳಿ ಎಂಬ ಮಾನವೀಯ ಘೋಷಣೆಯೊಂದಿಗೆ ನಡೆದ ಈ ಸೇವಾ ಕಾರ್ಯವು ಸಾಮಾಜಿಕ ಕಾಳಜಿ, ಸಹಬಾಳ್ವೆ ಮತ್ತು ಪರಸ್ಪರ ಸಹಕಾರದ ಮಹತ್ವವನ್ನು ಸಾರಿತು.
ಈ ಸಂದರ್ಭದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ.) ಅಧ್ಯಕ್ಷರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) (ರಿ.) ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ, ಉಡುಪಿಯ ಬೌದ್ಧ ಧಮ್ಮಾಚಾರಿಗಳಾದ ಮುರಳಿ ಮಾರ್ಪಳ್ಳಿ, ಕದಸಂಸ ಅಂಬೇಡ್ಕರ್ ಮಾರ್ಗದ ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ, ಸುಧೀರ್ ಒಳಗುಡ್ಡೆ, ರೂಪಾ ವಿ. ಹಾವಂಜೆ, ಸುನಿತಾ ಒಳಗುಡ್ಡೆ, ಲೀಲಾ ಒಳಗುಡ್ಡೆ, ಉಡುಪಿಯ ಕಿರುಚಿತ್ರ ನಿರ್ಮಾಪಕರು , ನಿರ್ದೇಶಕರು, ಚಿತ್ರಕಲಾ ಶಿಕ್ಷಕರು,ಹಾಗೂ ಸಂಗೀತ ನಿರ್ದೇಶಕರಾದ ದಿನೇಶ್ ಕೊಡವೂರು, ಉಡುಪಿ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಅನಿಲ್ ಫೆರ್ನಾಂಡಿಸ್ ಬಾರ್ಕೂರು, ವಸಂತಿ ಗೋಪಾಲ್ ಶಿವಪುರ, ಸಾನ್ವಿ, ಸನ್ನತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪ್ಪೂರು–ಸಾಲ್ಮರ ಹಾಗೂ ನೇಜಾರಿನ ಸ್ಪಂದನ ದಿವ್ಯಾಂಗರ ತರಬೇತಿ ಮತ್ತು ಸಂರಕ್ಷಣಾ ಸಂಸ್ಥೆಗಳ ಮುಖ್ಯಸ್ಥರಾದ ಉಮೇಶ್ ಸರ್ ಹಾಗೂ ಜನಾರ್ಧನ ಸರ್, ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿಶೇಷ ಚೇತನ ಮಕ್ಕಳು ಈ ಸೇವಾ ಕಾರ್ಯದಲ್ಲಿ ಭಾಗವಹಿಸಿದರು.
ಈ ಮಾನವೀಯ ಸೇವಾ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿ, ಸಹಕರಿಸಿದ ಎಲ್ಲರಿಗೂ ಸಂಸ್ಥೆಗಳ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು.
“ಹಬ್ಬದ ಹೆಸರಿನಲ್ಲಿ ಆಹಾರ ವ್ಯರ್ಥವಾಗಬಾರದು; ಹಸಿದವರ ಹೊಟ್ಟೆ ತುಂಬಬೇಕು.
ಕಲ್ಲಿಗೆ ಸುರಿಯುವ ಹಾಲಿಗಿಂತ, ಮಗುವಿನ ಕೈಗೆ ನೀಡುವ ಹಾಲು ಅಮೂಲ್ಯ.
ನೀರಿನಲ್ಲಿ ಹರಿಯುವ ಎಳನೀರಿಗಿಂತ, ಅಗತ್ಯವಿರುವವರ ಬದುಕಿನಲ್ಲಿ ಹರಿಯುವ ಕರುಣೆ ಶ್ರೇಷ್ಠ.”
ಈ ಮಾನವೀಯ ಚಿಂತನೆ ಪ್ರತಿಯೊಂದು ಮನೆಗೂ ತಲುಪಿ, ಆಚರಣೆಗಳು ವ್ಯರ್ಥತೆಯಲ್ಲ, ಸೇವೆ ಮತ್ತು ಸಹಾನುಭೂತಿಯ ಸಂಕೇತವಾಗಲಿ ಎಂಬ ಆಶಯದೊಂದಿಗೆ ಅಭಿಯಾನ ಮುಂದುವರಿಯಲಿದೆ.
Swabhimananews.
