ಉಡುಪಿ:ಜನವರಿ -1-2026 swabhimananews
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆಯಲ್ಲಿರುವ ಬೋಧಿಸತ್ವ ಬುದ್ಧ ಫೌಂಡೇಶನ್ ರವರ ಬೋಧಿಸತ್ವ ಬುದ್ಧ ವಿಹಾರದಲ್ಲಿ,ದಿನಾಂಕ ಜನವರಿ 1ನೇ 2026 ರಂದು ಭೀಮಕೋರೆಗಾಂವ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಡುಪಿಯ ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ ರವರ ಮಾತಲ್ಲಿ
ಬೋಧಿ ಸತ್ವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯದ ವ್ಯಕ್ತಿಗಳು ಯಾರೇ ಆದರೂ ಅವರ ಬಾಳು ವ್ಯರ್ಥ ಎಂದು
ಎಚ್ಚರಿಸಿದರು.

ಅವರು ಇಲ್ಲಿನ ಬೋಧಿ ಸತ್ವ ಬುದ್ಧ ವಿಹಾರದಲ್ಲಿ ಬುದ್ಧ ವಂದನೆ ನೆರವೇರಿಸಿದ ಬಳಿಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ(ರಿ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೋರೆ ಗಾಂವ್ ವಿಜಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ
ಹೇಳಿದರು.

ಮುಂದುವರಿದು ಭಾರತದ ಸಮಸ್ತ ನಾಗರಿಕರ, ಶೋಷಿತರ ಭವಿಷ್ಯಕ್ಕಾಗಿ ತಮ್ಮ ಸಮಗ್ರ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಅಂಬೇಡ್ಕರ್ ಈ ವ್ಯವಸ್ಥೆಯಲ್ಲಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಮಾರ್ಗ ದರ್ಶನ ನೀಡಿದ್ದಾರೆ.

ತಲತಲಾಂತರದಿಂದ ಬಂದ ಮೌಢ್ಯ, ಅಜ್ಞಾನ, ದ್ವೇಷ ಅಸೂಯೆಗಳಿಂದ ಮುಕ್ತರಾಗಿ ಬದುಕಲು ತಥಾಗತಭಗವಾನ್ ಬುದ್ಧರ ತತ್ವಗಳು ಹೇಗೆ ಸಹಕಾರಿ ಆಗುತ್ತವೆ ಎಂಬುದನ್ನು ವಿವರಿಸಿ ಅದರಂತೆ ಮುನ್ನಡೆಯುವ ಅಗತ್ಯವನ್ನು ಒತ್ತಿ ಹೇಳಿದರು.

ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ಮಾತನಾಡುತ್ತಾ ಆಧುನಿಕತೆಯ ಈ ದಿನಗಳಲ್ಲಿ ಕೂಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಅಂಬೇಡ್ಕರ್ ಅವರು ತೋರಿದ ಮಾರ್ಗವನ್ನು ಬಿಟ್ಟು ದೈವ ದೇವರುಗಳ ಮೌಢ್ಯ, ಕಂದಾಚಾರಗಳ ಸುತ್ತಲೂ ಗಿರಾಕಿ ಹೊಡೆಯುತ್ತಾ ತಮ್ಮ ಬದುಕಿನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು.

ಬುದ್ಧ ವಂದನೆ ಸಂದರ್ಭದಲ್ಲಿ ಪಾಲಿ ಭಾಷೆಯಲ್ಲಿ ಉಚ್ಚರಿಸುವ ಕೆಲವು ಪದಗಳ ಅಪಭ್ರಂಶಗಳನ್ನು ತಿದ್ದಿ ಕೊಳ್ಳಲು ಸೂಚಿಸುತ್ತಾ ಅಂಬೇಡ್ಕರ್ ಅವರು ಶೋಷಿತರ ಭವಿಷ್ಯಕ್ಕಾಗಿ, ಉದ್ಧಾರಕ್ಕಾಗಿ ಎಷ್ಟೆಲ್ಲ ಕಾನೂನು ಕಾಯ್ದೆಗಳನ್ನು ರೂಪಿಸಿ ಸರ್ಕಾರದ ಮೂಲಕ ಅವೆಲ್ಲವೂ ಜಾರಿಗೆ ಬರುವಂತೆ ಮಾಡಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದ ಶೋಷಿತರ ಅಜ್ಞಾನ, ಔದಾಸೀನ್ಯಗಳನ್ನು ಕಟುವಾಗಿ ಟೀಕಿಸಿದರು.

ತಮ್ಮ ಬದುಕಿನ ಪುಟಗಳನ್ನೇ ತಿರುವಿ ತೋರಿದ ಅವರು ತಮ್ಮ ಒಬ್ಬ ಪುತ್ರನನ್ನು ಧಮ್ಮಕ್ಕಾಗಿ ಮುಡಿಪಾಗಿಟ್ಟು ಬೌದ್ಧ ಧರ್ಮ ಪ್ರಸಾರಕ್ಕಾಗಿ ಇದೀಗ ಭಂತೇಜಿಯಾಗಿ ಆ ಮೂಲಕ ತಮ್ಮ ಇಡೀ ಕುಟುಂಬ ಧಮ್ಮ ಸೇವೆಯಲ್ಲಿ ನಿರತವಾಗಿದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದರು.

ಆದ್ದರಿಂದ ಆರ್ಥಿಕ ಸಾಮಾಜಿಕ ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ಜಾತಿ ಜನಾಂಗಗಳಿದ್ದರೂ ಅಂಥವರು ತಮ್ಮೊಳಗೆ ಅಡಗಿರುವ ಮೌಢ್ಯಗಳ ಭಯದಿಂದ ಮುಕ್ತರಾಗಿ ಧೈರ್ಯ ಸ್ಥೈರ್ಯಗಳಿಂದ ಬದುಕನ್ನು ಎದುರಿಸಬೇಕು.ಅದಕ್ಕೆ ಪೂರಕವಾಗಿ ಬಾಬಾ ಸಾಹೇಬರ ತತ್ವ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧಮ್ಮಾಚಾರಿ ಮುರಳೀಧರ ಮಾರ್ಪಳ್ಳಿ ಮಾತನಾಡಿ ಬೌದ್ಧ ಧಮ್ಮಪಥ ಸರ್ವರಿಗೂ ಅಗತ್ಯವಿದೆ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ,ಉಪಾಸಕ ಮತ್ತು ಲೇಖಕ ಚನ್ನಬಸವ ಪುತ್ತೂರ್ಕರ ಮಾತನಾಡಿ ಕೋರೆ ಗಾಂವ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ವಾಭಿಮಾನ , ಕೆಚ್ಚು, ತ್ಯಾಗ, ಬಲಿದಾನ ಇಂದಿಗೂ ಪ್ರಸ್ತುತ ಆಗಿರುವುದರಿಂದ ಅವೆಲ್ಲವೂ ನಮ್ಮೆಲ್ಲರಲ್ಲಿ ಸದಾ ಮಿಡಿಯುತ್ತಿರಬೇಕು.ಅಂಬೇಡ್ಕರ್ ಅವರು ಕೊಟ್ಟ ಮೂರು ಅಮೂಲ್ಯ ವಾಕ್ಯಗಳಾದ ಶಿಕ್ಷಣ, ಸಂಘಟನೆ, ಹೋರಾಟ ನಮ್ಮ ಜೀವನ ಮಂತ್ರವಾಗಬೇಕಿದೆ.ಜತೆಗೆ ಬೋಧಿ ಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಪ್ಪಿಕೊಂಡ ಧಮ್ಮಪಥ ನಮ್ಮೆಲ್ಲರ ನಿತ್ಯ ಬದುಕಾಗಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಖ್ಯಾತ ವಾಗ್ಮಿ ವಿಠ್ಠಲ್ ಸಾಲೀಕೇರಿ ಕೋರೆ ಗಾಂವ್ ಯುದ್ಧದ ಹಿನ್ನೆಲೆ ಮುನ್ನೆಲೆಗಳನ್ನು ಸವಿಸ್ತಾರವಾಗಿ ತಿಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಜೀವ್ ಸ್ವಾಗತಿಸಿದರು.ಶ್ರೇಯಾ ವಿ.ಆರ್.ಕಾರ್ಯಕ್ರಮ ನಿರೂಪಿಸಿದರು ಹಾಗೂ ಸತೀಶ್ ಒಳಗುಡ್ಡೆ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ.

ದಸಂಸ ಭೀಮವಾದದ ಜಿಲ್ಲಾ ಸಂಚಾಲಕರಾದ ಸಂಜೀವ್, ಸಂಘಟನಾ ಸಂಚಾಲಕರುಗಳಾದ.ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್, ಸಮಿತಿ ಸದಸ್ಯರಾದ ಸುಜಾತ ಎಸ್ ಹಾವಂಜೆ, ಸುನಿತಾ ಒಳಗುಡ್ಡೆ, ಮುದ್ದು ಅಜೆಕಾರು, ಸುದೀರ್ ಒಳಗುಡ್ಡೆ,ಸದಸ್ಯರಾದ.ಮುತ್ತಕ್ಕ ,ರೂಪ ವಿ, ಸುರೇಖಾ,
ಸತೀಶ್ ಹಾವಂಜೆ,ಲೀಲಾ, ಬೇಬಿ,ಪುಟಾಣಿಗಳಾದ (ಸನ್ನತಿ ಎಸ್ ಜೆ) ಮತ್ತು ಗೌತಮಿ.ಎಸ್ಆರ್.ಹಾಗೂ ಇನ್ನಿತರರು
ಉಪಸ್ಥಿತರಿದ್ದರು.

Swabhimananews
