ಉಡುಪಿ ಮೇ -03-2026 swabhimananews
2570ನೇ ಬುದ್ಧ ಜಯಂತಿಯನ್ನು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ, ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಮಾರ್ಗ ಉಡುಪಿ ಜಿಲ್ಲೆ ಇವರ ಜಂಟಿ ಸಹಯೋಗದಲ್ಲಿ ಆಚರಿಸಲಾಯಿತು.

ಬುದ್ಧ ಜಯಂತಿಯ ಏಳು ದಿನಗಳ ಮುಂಚಿತವಾಗಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮನೆ ಮನೆಗೆ ಬುದ್ಧ ನಡಿಗೆ ಎಂಬ ಸತ್ತಹ (ಸಪ್ತಾಹ) ಕಾರ್ಯಕ್ರಮ ನಡೆಯಿತು. ದಿನಾಂಕ:- 24/4/2026ರ ರಂದು ಆರಂಭಗೊಂಡ ಸತ್ತಹ (ಸಪ್ತಾಹ) ಕಾರ್ಯಕ್ರಮವು 01/05/2026ರಂದು ಮುಕ್ತಾಯಗೊಂಡಿತು.
ದಿನಾಂಕ:- 30/04/2026 ರಂದು ಸುಮಾರು 50ಕ್ಕೂ ಹೆಚ್ಚಿನ ವಾಹನಗಳೊಂದಿಗೆ ವಾಹನ ಪಂಚಸೀಲ ಜಾಥವು ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಿಂದ ಹೊರಟು ಶೀಂಬ್ರ, ಮಣಿಪಾಲ, ಇಂದ್ರಾಳಿ ಮಾರ್ಗದಿಂದ ಉಡುಪಿಯ ಕ್ಲಾಕ್ ಟವರ್, ನ್ಯಾಯಾಲಯದ ಮುಂದಿನಿಂದ ಸಾಗಿ ಜೋಡುಕಟ್ಟೆ, ಬ್ರಹ್ಮಗಿರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮಾರ್ಗವಾಗಿ ಬನ್ನಂಜೆ, ಕರಾವಳಿ ಬೈಪಾಸ್ ಮೂಲಕ ಸಾಗಿ ಆದಿ ಉಡುಪಿಯಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಧಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಹನ ಜಾಥವು ಸಮಾಪ್ತಿಗೊಂಡಿತು.
ದಿನಾಂಕ:-01/05/2026 ರ ಶುಕ್ರವಾರ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ 2570ನೇ ಜಯಂತಿ ಆಚರಣೆಯ ಅಂಗವಾಗಿ ಉಡುಪಿಯ ಎಲ್ಲಾ ಧಮ್ಮಾಚಾರಿಗಳ ನೇತೃತ್ವದಲ್ಲಿ, ಜಂಟಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಧಮ್ಮ ಪ್ರವಚನ ಹಾಗೂ ಕರಣೀಯ ಮೆತ್ತಾ ಸುತ್ತ, ರತನ ಸುತ್ತ, ಮಹಾಜಯಮಂಗಳ ಗಾಥಾ, ಅಟ್ಠವೀಸತಿ ಬುದ್ಧವಂದನಾ ಪಠಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು BSI ನ ಜಿಲ್ಲಾ ಅಧ್ಯಕ್ಷರಾದ ಅಜಯ್ ಕುಮಾರ್ ವಹಿಸಿದ್ದರು.

ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾನು ಹುಟ್ಟು ಬೌದ್ಧನಾಗಿರುವುದನ್ನು ಹಾಗೂ ಯಾವ ರೀತಿಯಲ್ಲಿ ಧಮ್ಮದ ಹಾದಿಯಲ್ಲಿ ನಡೆದು ಬಂದಿರುವೆ ಎಂಬುದರ ಬಗ್ಗೆ ಸವಿಸ್ತಾರವಾಗಿ ಹೇಳಿದರು. 7 ದಿನಗಳ ಕಾಲ ನಡೆದ ಸತ್ತಹದ ಸವಿವರವನ್ನು ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷರಾದ ಶೇಖರ್ ಹಾವಂಜೆ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು ಮತ್ತು ಬೌದ್ಧ ಧಮ್ಮದ ವಿಚಾರದ ಬಗ್ಗೆ ಮಾತನಾಡುತ್ತಾ ಧಮ್ಮದ ಹಾದಿಯನ್ನು ತೋರಿಸಿಕೊಟ್ಟವರು ಡಾ. ಬಿ.ಆರ್ ಅಂಬೇಡ್ಕರ್ ರವರು ಅಂಬೇಡ್ಕರ್ ರವರನ್ನು ನಾವು ನಮ್ಮ ಹೆತ್ತ ತಾಯಿಯಂತೆ ಗೌರವದಿಂದ ಕಾಣಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ BSI ನ ರಮೇಶ್ ರಘುರಾಮ್ ರವರು ಒಳ್ಳೆಯ ಮಾತು, ಒಳ್ಳೆಯ ನಡತೆ, ಒಳ್ಳೆಯ ಯೋಚನೆ ಈ ಮೂರು ವಿಷಯಗಳ ಕುರಿತು ಮಾತನಾಡುತ್ತಾ. ಈ ಮೂರು ವಿಷಯಗಳನ್ನು ನಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಉಡುಪಿಯ ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣರವರು ಮಾತನಾಡುತ್ತಾ ಭಾವುಕರಾಗಿ ಕೆಲವು ನುಡಿಗಳನ್ನು ಹೇಳಿದರು.

ನಾನು ಹತ್ತು ವರ್ಷಗಳ ಹಿಂದೆ ಧಮ್ಮದ ಹಾದಿಯಲ್ಲಿ ಹೊರಟಾಗ ನನ್ನನ್ನ ಎಷ್ಟೋ ಜನ ಟೀಕೆ ಮಾಡಿದ್ದರು ಆದರೂ ನಾನು ಕುಗ್ಗದೆ ನನ್ನಿಂದ ಆದಷ್ಟು ಧಮ್ಮ ಚಟುವಟಿಕೆಯಲ್ಲಿ ಸಕ್ರಿಯನಾದೆ ಇಂದು ಉಡುಪಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬುದ್ಧ ಧಮ್ಮ ಬೆಳೆದಿದೆ ಎಂದರೆ ಅದು ದೊಡ್ಡ ಹೆಮ್ಮೆ ನಮಗೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಮುರಳೀಧರ್ ಮಾರ್ಪಳ್ಳಿ ಧಮ್ಮಾಚಾರಿಗಳು ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ಮಾರ್ಗದ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ್ ಶಿವಪುರ, ಉಪಾಸಿಕ ಸುಮಿತ್ರ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು BSI ನ ಪ್ರಶಾಂತ್ ತೊಟ್ಟಂ ನಿರ್ವಹಿಸಿದರು. ಸ್ವಾಗತ ಮತ್ತು ಧನ್ಯವಾದಗಳನ್ನು ವಿಠಲ್ ಸಾಲಿಕೇರಿ ನಿರ್ವಹಿಸಿದರು. ಒಟ್ಟಾರೆ 7 ದಿನದ ಸತ್ತಹ (ಸಪ್ತಾಹ) ಕಾರ್ಯಕ್ರಮ ಮತ್ತು 2570ನೇ ಬುದ್ಧ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಪಂಚಸೀಲ ವಾಹನ ಜಾಥ ನಂತರದ ಹಾಗೂ ಎಲ್ಲಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಯಶಸ್ವಿಗೊಂಡಿತು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಆಯೋಜಕರೊಂದಿಗೆ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಕಾರ್ಯದರ್ಶಿ, ಟ್ರಸ್ಟಿಗಳು, ಪದಾಧಿಕಾರಿಗಳು ಹಾಗೂ ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಉಪಾಸಕ ಉಪಾಸಿಕರು,ವಿಪಶ್ಯನ ಸಾಧಕರಾದ ಚನ್ನಬಸವ ಪುತ್ತೂರ್ಕರ್, ಅಂಬೇಡ್ಕರ್ ಯುವ ಸೇನೆಯ ಹರಿಶ್ ಸಾಲ್ಯಾನ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಮಾರ್ಗ ಇದರ ಜಿಲ್ಲಾ ಸಂಚಾಲಕರು, ಖಜಾಂಚಿ, ಜಿಲ್ಲಾ ಸಂಘಟನಾ ಸಂಚಾಲಕರು, ಸದಸ್ಯರು, ಉಪಾಸಕ, ಉಪಾಸಿಕರು, ಎಲ್ಲಾ ಬೌದ್ಧ ಅನುಯಾಯಿಗಳು, ಅಂಬೇಡ್ಕರ್ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Swabhimananews.
