Udupi: havanje ಏಪ್ರಿಲ್ 14-2025 swabhimananews
ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ದಿನಾಂಕ:-14/04/2025 ರಂದು ಹಾವಂಜೆ ಗ್ರಾಮದ ಬೋಧಿಸತ್ವ ಬುದ್ಧ ವಿಹಾರದಲ್ಲಿ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ರವರ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಡುಪಿಯ ಬೌದ್ಧ ಧಮ್ಮಾಚಾರಿ ಶಂಭು ಮಾಸ್ತರ್ ರವರ ನೇತೃತ್ವದಲ್ಲಿ ಬುದ್ಧ ವಂದನೆ, ಮೈತ್ರಿ ಧ್ಯಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಕೆ.ಪಿ ಮಹಾಲಿಂಗು ಕಲ್ಕುಂದ ಸಾಹಿತಿಗಳು ಮತ್ತು ಪ್ರಾದೇಶಿಕ ನಿರ್ದೇಶಕರು ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರ ಉಡುಪಿ ರವರು ಉದ್ಘಾಟಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಪ್ರಧಾನ ಭಾಷಣಕಾರರಾಗಿ ಆಗಮಿಸಿದ
ಡಾ. ಏಕಾಂತಗಿರಿ ಅವರು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ನ ಲಾಂಛನವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಾ ಅಂಬೇಡ್ಕರ್ ರವರು ಕೇವಲ ಪರಿಶಿಷ್ಟ ಜಾತಿ, ವರ್ಗದ ಸೊತ್ತಲ್ಲ,ಸಮಗ್ರ ಭಾರತೀಯರ ಸೊತ್ತು ಎಂಬ ಸತ್ಯವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಅರಿಯಬೇಕಿದೆ ಎಂದು ನುಡಿದರು.
ಅವರು ಸಮಾರಂಭದ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ ಸಮಸ್ತ ಭಾರತೀಯರ ಹಿತಕಾಯುವ ಸದೃಢ ಸಂವಿಧಾನ ರಚಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ತ್ಯಾಗ ಜೀವಿ, ಮಹಾನ್ ಮಾನವತಾವಾದಿ ಎಂಬುದನ್ನು ವಿವರಿಸಿದರು.
ದೇಶದ ಮಹಿಳೆಯರ ಪೈಕಿ ಶೇಕಡಾ 50 ಮಹಿಳೆಯರಿಗೆ ವಿಧವಾ ವಿವಾಹ, ಆಸ್ತಿ ಹಕ್ಕು, ಸಮಪಾಲು, ಸಮಬಾಳು, ಮುಂತಾದ ಸರ್ವ ಸಮಾನತೆಯನ್ನು ಕಲ್ಪಿಸಿದ್ದ ಹಿಂದೂ ಕೋಡ್ ಬಿಲ್ಲನ್ನು ಆಕ್ಷೇಪಿಸಿದವರಿಗೆ ನೀವು ಸಂವಿಧಾನದ ಸೆಕ್ಷನ್ 340ನ್ನೊಮ್ಮೆ ಓದಿ ನೋಡಿ ಎಂದು ತಿಳಿಸಿದರು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಕೆಲವರ ಉಗ್ರ ಟೀಕೆಗೆ ಮಣಿಯದ ಅಂಬೇಡ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಾನ್ ತ್ಯಾಗ ಜೀವಿ, ನಿಷ್ಠುರವಾದಿ.
ಅಸ್ಪೃಶ್ಯತೆ,ಅಸಮಾನತೆಗಳೇ ತಾಂಡವವಾಡುತ್ತಿದ್ದ ಆ ಕಾಲದಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ಮತ್ತು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಮಾರ್ಗ ಸೂಚಿಯನ್ನು ಅಂಬೇಡ್ಕರ್ ಅವರು ವಿಶೇಷವಾಗಿ ಈ ದೇಶದ ಶೋಷಿತ ವರ್ಗಕ್ಕೆ ಹಾಕಿಕೊಟ್ಟಿದ್ದರು.
ಆದರೆ ಅದು ಇನ್ನೂ ಕೂಡ ಸಮರ್ಪಕವಾಗಿ, ಯಶಸ್ವಿಯಾಗಿ ಸಾಕಾರಗೊಳ್ಳದಿರುವುದು ನಮ್ಮ ದೇಶದ ದುರಂತವೆಂದು ಮಾರ್ಮಿಕವಾಗಿ ನುಡಿದರು.
ವಿಶೇಷವಾಗಿ ಶೋಷಿತರ ಬದುಕು ಮನುವಾದಿಗಳ ಹಿಡಿತದಿಂದ ಪಾರಾಗಿ ಸರ್ವ ಸಮಾನತೆಯ ಸ್ವಾವಲಂಬಿಗಳಾಗಿ ಬದುಕಲು ತಮ್ಮ ಹಕ್ಕುಗಳನ್ನು ಅರಿತುಕೊಂಡು ಶಿಕ್ಷಿತರಾಗಬೇಕು ಮಾತ್ರವಲ್ಲ ಸಂಘಟಿತ ಹೋರಾಟದಿಂದ ಸಮಾನತೆಯ ಬದುಕನ್ನು ಸಾಧಿಸಿಕೊಳ್ಳಬೇಕಿದೆ.
ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲ ಮನುವಾದದಿಂದ ಹೊರತಾದ ಬೌದ್ಧ ಧರ್ಮದ ಹಾದಿಯಲ್ಲಿ ಈ ಸಾಧನೆ ಸಾಧ್ಯವಾಗುತ್ತದೆ ಹಾಗಾಗಿ ನಾವೆಲ್ಲರೂ ದೇವರು ಧರ್ಮದ ವಿಷಯದಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ.
ಇದಕ್ಕಾಗಿ ನಮ್ಮ ಟ್ರಸ್ಟ್ ಎಲ್ಲಾ ರೀತಿಯಿಂದಲೂ ಶ್ರಮಿಸಿದೆ. ನಮ್ಮ ಶ್ರಮಕ್ಕೆ ಸರ್ವರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.ಆ ಮೂಲಕ ಸದೃಢ, ಸರ್ವ ಸಮಾನತೆಯ ನವ ಭಾರತ ನಿರ್ಮಾಣಕ್ಕೆ ಮುಂದಾಗೋಣ ಎಂದು ಹೇಳಿದರು.
ಅಂಬೇಡ್ಕರ್ ವಾದಿ, ವಿಚಾರವಂತರು,ಬೌದ್ಧ ಚಿಂತಕರು,ಮಹಾ ಉಪಾಸಕರಾದ ಸೋಮಪ್ಪ H.G ರವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಬಾಬಾಸಾಹೇಬರ ಕುರಿತು ಮತ್ತು ಭಗವಾನ್ ಬುದ್ಧರ ಧಮ್ಮದ ಕುರಿತು ಸಂಪೂರ್ಣವಾಗಿ ಸವಿಸ್ತಾರವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಾವರ ವಲಯದ ಶಿಕ್ಷಣ ಸಂಯೋಜಕರಾದ ಪ್ರಕಾಶ್ ಬಿ.ಬಿ ರವರು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ನ ಜಾಲತಾಣವನ್ನು ಲೋಕಾರ್ಪಣೆ ಗೈದು ಮಾತನಾಡಿದರು
ಶೋಷಿತ ಸಮುದಾಯಕ್ಕೆ ರಾಜಕೀಯ ಸಮಾನತೆಯನ್ನು ನೀಡಿದಂತಹ ಮಹಾ ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ಎಂದರು. ಈ ದೇಶದಲ್ಲಿ ಇದ್ದಂತಹ ಅಸಮಾನತೆಯನ್ನು ಸವಿವರವಾಗಿ ವಿವರಿಸಿದರು ಹಾಗೂ ಉಡುಪಿಯಲ್ಲಿ ನಾನು ಬೌದ್ಧ ಧಮ್ಮದ ಸಂಸ್ಕೃತಿಯನ್ನು ನೋಡುತ್ತಾ ನೋಡುತ್ತಾ ಬೌದ್ಧ ಧಮ್ಮದ ಕಡೆ ತಾನು ತನ್ನ ಕುಟುಂಬ ಸಮೇತರಾಗಿ ಬಂದಿರುವುದನ್ನು ಸವಿವರವಾಗಿ ವಿವರಿಸಿದರು.
BSI ಉಡುಪಿ ಜಿಲ್ಲೆ ಇದರ ಪದಾಧಿಕಾರಿಗಳಾದ ರಮೇಶ್ ರಘುರಾಂ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಬೌದ್ಧ ಧಮ್ಮದ ಪಂಚಶೀಲಗಳನ್ನು ಅರ್ಥಪೂರ್ಣವಾಗಿ ವಿವರಿಸಿದರು ಹಾಗೂ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಯಾವುದೇ ವೇದಿಕೆಯಲ್ಲಿ ಅವಕಾಶ ಸಿಕ್ಕಿರುವುದನ್ನು ಸಮಗ್ರವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿಯ ಬೌದ್ಧ ಧಮ್ಮಾಚಾರಿ ಶಂಭು ಮಾಸ್ತರ್ ಮಾತನಾಡುತ್ತಾ ಪ್ರತಿಯೊಬ್ಬರು ಬೌದ್ಧ ಧಮ್ಮದ ಮಹತ್ವವನ್ನು ಸಂಪೂರ್ಣವಾಗಿ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಸಮೂಹಕ್ಕೆ ಕರೆಕೊಟ್ಟರು.
ಚೇತನಾ ಪ್ರೌಢ ಶಾಲೆಯ
ಕನ್ನಡ ಅಧ್ಯಾಪಕರಾದ ಫಕೀರಪ್ಪರವರು ಮಾತನಾಡುತ್ತಾ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ನಿಮ್ಮ ಮೆದುಳಿಗೆ ಹಾಕಿರುವ ದಾರದ ಬೇಡಿಯನ್ನು ಕಿತ್ತೊಗೆಯಿರಿ ಎಂದು ಯುವ ಸಮುದಾಯಕ್ಕೆ ಮಹತ್ವದ ಸಂದೇಶವನ್ನು ನೀಡಿದರು. ಹಾಗೂ ನೆರೆದಿರುವ ಸಭಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜೈ ಭೀಮ್ ಘೋಷಣೆಯ ಸಮಾನ ಅರ್ಥ ಕೃತಜ್ಞತೆ ಎಂದು ಒತ್ತಿ ಹೇಳಿದರು ಮತ್ತು ಜೈ ಭೀಮ್ ಪದವನ್ನು ನಾವೆಲ್ಲರು ಬಳಸಬೇಕು ಎಂದರು.
ಹಾವಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆಶಾ.ಡಿ. ಪೂಜಾರಿಯವರು ಮಾತನಾಡುತ್ತಾ ಈ ಗ್ರಾಮೀಣ ಪ್ರದೇಶಗಳ ಜನರಿಗೆ ಅಂಬೇಡ್ಕರ್ ಗೊತ್ತೇ ಹೊರತು ಅವರ ಇಷ್ಟೊಂದು ಮಹತ್ವದ ವಿಚಾರಗಳು ಗೊತ್ತಿರಲಿಲ್ಲ. ಈ ಬೋಧಿಸತ್ವ ಬುದ್ಧ ಫೌಂಡೇಶನ್ ನ ಪದಾಧಿಕಾರಿಗಳು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಮಕ್ಕಳಿಗೆ ಅಂಬೇಡ್ಕರ್ ಹಾಗೂ ಈ ದೇಶದ ಸಂವಿಧಾನ ಮತ್ತು ಗೌತಮ ಬುದ್ಧರ ಬಗ್ಗೆ ತಿಳಿಸಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ.
RPIK ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು ಮಾತನಾಡಿ ಯಾವುದೇ ಕಾರ್ಯಕ್ರಮದಲ್ಲಿ ಸಮಯ ಪ್ರಜ್ಞೆ ಎನ್ನುವುದು ಅತೀ ಅಗತ್ಯ ಎಂದು ಒತ್ತಿ ಒತ್ತಿ ಹೇಳಿದರು.
ಕ.ದ.ಸಂ.ಸ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ಜಿಲ್ಲಾ ಸಂಚಾಲಕರಾದ ಸಂಜೀವ ಕುಕ್ಕೆಹಳ್ಳಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಮತ್ತು ಶಿಕ್ಷಣ ಅಗತ್ಯತೆಯನ್ನು ಸಂಪೂರ್ಣವಾಗಿ ಸವಿವರಿಸಿದರು.
A.G ವಿವೇಕಾನಂದ,ಮಾಜಿ ಮುಖ್ಯಸ್ಥರು ವಿಶ್ವವಿದ್ಯಾನಿಲಯ ವಿಜ್ಞಾನ ಉಪಕರಣ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತನಾಡುತ್ತಾ ಮೌಢ್ಯ ಈ ಸಮಾಜವನ್ನು ಯಾವ ರೀತಿಯಲ್ಲಿ ಸುತ್ತುವರಿದಿದೆ ಎಂಬುದನ್ನು ಸ್ಪಷ್ಟಪಡಿಸಿದರು.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿರುವ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ನ ಅಧ್ಯಕ್ಷರಾದ ಶೇಖರ್ ಹಾವಂಜೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಬೋಧಿಸತ್ವ ಬುದ್ಧ ಫೌಂಡೇಶನ್ ಸ್ಥಾಪನೆಯ ಉದ್ದೇಶ ಮತ್ತು ಯಾವ ಗುರಿಯನ್ನು ಹೊಂದಿದೆ ಮತ್ತು ಈ ಫೌಂಡೇಶನ್ ನ ಕಾರ್ಯ ಚಟುವಟಿಕೆಗಳಿಂದ ಬೌದ್ಧ ಧಮ್ಮಕ್ಕೆ ಮತ್ತು ಸಮಾಜಕ್ಕೆ, ಶೋಷಿತರಿಗೆ, ನೊಂದವರಿಗೆ, ಅಸಹಾಯಕರಿಗೆ, ಅನಾಥರಿಗೆ ಯಾವ ರೀತಿಯಲ್ಲಿ ಸಹಕಾರಿ ಆಗಲಿದೆ ಎಂದು ಸಂಪೂರ್ಣವಾಗಿ ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಪ್ರಣೀತಾರವರು ಸುಶ್ರಾವ್ಯವಾಗಿ ಮನತಟ್ಟುವಂತೆ ಭೀಮಗೀತೆ ಹಾಡಿ ಸರ್ವರ ಮನಗೆದ್ದರು. ಹಾಗೆಯೇ ಸ.ಹಿ.ಪ್ರಾ.ಶಾಲೆ ಮುಗ್ಗೇರಿ ಇಲ್ಲಿನ ವಿದ್ಯಾರ್ಥಿನಿ ಅನನ್ಯ ಮತ್ತು ಸ.ಪ್ರೌಢ.ಶಾಲೆ ಉಪ್ಪೂರು ಇಲ್ಲಿನ ವಿದ್ಯಾರ್ಥಿನಿ ದೀಕ್ಷಾ ರವರು ಅಂಬೇಡ್ಕರ್ ರವರ ಕುರಿತು ನಿರರ್ಗಳವಾಗಿ ಭಾಷಣ ಮಾಡಿ ತಮ್ಮ ಪ್ರತಿಭಾ ಪರಿಚಯ ಮಾಡಿಕೊಟ್ಟರು. ಡಾ.ಬಿ.ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವದ ಪ್ರಯುಕ್ತ ದಿನಾಂಕ:-
10/04/2025 ರಂದು ನಡೆದ ಅಂಬೇಡ್ಕರ್ ರವರ ಕುರಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಎಲ್ಲಾ ಮುಖ್ಯ ಅತಿಥಿಗಳು ಒಟ್ಟು ಸೇರಿ ಬಹುಮಾನವನ್ನು ವಿತರಿಸಿದರು.
ಆಯುಷ್ಮಾತಿ ಜಯಶೀಲ.ಬಿ.ರೋಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಬೋಧಿಸತ್ವ ಬುದ್ಧ ಫೌಂಡೇಶನ್ ನ ಕಾರ್ಯದರ್ಶಿ ಶರತ್.ಎಸ್. ಹಾವಂಜೆಯವರು ಸರ್ವರನ್ನೂ ಸ್ವಾಗತಿಸಿದರು. ಬೌದ್ಧ ಚಿಂತಕರು ವಿಠಲ್ ಸಾಲಿಕೇರಿರವರು ವಂದನಾರ್ಪಣೆ ಮಾಡಿದರು. ಜಾತಿ ಧರ್ಮ ತೊರೆದು ಇನ್ನೂರಕ್ಕೂ ಹೆಚ್ಚಿನ ಸರ್ವಧರ್ಮೀಯರು ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
Swabhimananews.